Tuesday, July 31, 2007

ಅರೇಂಜ್ಡ್ ಮ್ಯಾರೇಜ್ - ಕಥೆ

ಇಂದಿನ ಯುವಜನಾಂಗದ ದೃಷ್ಟಿಯಲ್ಲಿ ಅರೇಂಜ್ಡ್ ಮ್ಯಾರೇಜ್ ಎಂಬುದು ಅರ್ಥ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯವಾಗಿ ಇಂಗ್ಲೀಷಿನಲ್ಲಿ ನಾನು ಓದಿದ ಸಣ್ಣ ಕಥೆಯೊಂದನ್ನು ಕನ್ನಡದಲ್ಲಿ ಓದಿಸುವ ಪ್ರಯತ್ನ ಮಾಡಿದ್ದೇನೆ
=======================================================

ದಟ್ಟವಾದ ಗಿಡಮರಗಳ ಮಧ್ಯ ಒದ್ದೆಯಾದ ಮಣ್ಣಿನ ದಾರಿಯಲ್ಲಿ ಅವಳು ನಿಧಾನಕ್ಕೆ ಹೆಜ್ಜೆ ಹಾಕುತ್ತಿದ್ದಳು. ಪಕ್ಕದಲ್ಲಿ ಬರುತ್ತಿದ್ದವನು ತನ್ನ ಗಂಡ ಎಂದಷ್ಟೆ ಅವಳಿಗೆ ಗೊತ್ತಿತ್ತು. ಅವನು ಬಹಳ ಖುಷಿಯಾಗಿ, ದೂರದಲ್ಲೆಲ್ಲೋ ಆಡುತ್ತಿದ್ದ ಮಕ್ಕಳನ್ನು ನೋಡುತ್ತಾ ಬರುತ್ತಿದ್ದ. ಅವಳ ಕೈಯ ಮೆಹಂದಿ ಎರಡು ದಿನಗಳ ಸಂಭ್ರಮವನ್ನು ನೆನಪಿಸುತ್ತಿತ್ತು.

******* *****

ಹೇಯ್. ಅಲ್ನೋಡು... !!! ಆಶ್ಚರ್ಯದಿಂದ ಏನನ್ನೋ ತೋರಿಸುತ್ತಾ ಅವನು ಕೂಗಿದ.ಅವನು ತೋರಿಸದೆಡೆಗೆ ನೋಡಿದಳು.ಸುಂದರವಾದ ಬಣ್ಣ ಬಣ್ಣದ ಬಲೂನುಗಳಿಂದ ಆಕಾಶವು ತುಂಬಿ ಹೋಗಿತ್ತು. ಮಕ್ಕಳು ಆಕಾಶವನ್ನು ನೋಡುತ್ತಾ ಕುಣಿಯುತ್ತಿದ್ದರು.ಇವನು ಅದರಲ್ಲೇ ಪೂರ್ತಿ ಮುಳುಗಿಹೋಗಿದ್ದ. ಹೌದು, ಬಣ್ಣಗಳೆಂದರೆ ಯಾವಾಗಲೂ ಖುಷಿ ಕೊಡುವಂತದ್ದು.. ಆದರೆ ಈಗೇಕೋ ಹಾಗೆ ಅನಿಸುತ್ತಿಲ್ಲ. ಏಕೆಂದರೆ ಅವಳು ಅವಳ ಗೆಳತಿಯರೊಂದಿಗೆ ಇಲ್ಲ, ಅಪ್ಪ-ಅಮ್ಮಂದಿರೊಂದಿಗಿಲ್ಲ, ತನ್ನ ಸಹೋದ್ಯೋಗಿಗಳೊಂದಿಗೂ ಇಲ್ಲ. ಇದು ಶಾಲೆಯ ಅಥವಾ ಕಂಪನಿಯಿಂದ ಬಂದ ಪ್ರವಾಸವಾಗಿರಲಿಲ್ಲ. ಇದು ಅವಳ ಜೀವನದ ಪ್ರಶ್ನೆಯಾಗಿತ್ತು ಮತ್ತು ಅವಳ ಬದುಕನ್ನು ಈ ಹುಡುಗನೊಟ್ಟಿಗೆ ಒತ್ತಾಯಪೂರ್ವಕವಾಗಿ ಸೇರಿಸಲಾಗಿತ್ತು. ಒಂದು ರೀತಿಯ ಒಬ್ಬಂಟಿತನ, ಅಸಮಾಧಾನ ಮನಸ್ಸನ್ನು ಕಾಡುತ್ತಿತ್ತು. ತಾನು ಮದುವೆಯಾದ ಹುಡುಗನ ಹೆಸರು ಮತ್ತು ಕೆಲಸ ಇಷ್ಟು ಬಿಟ್ಟು ಮತ್ತೇನೂ ಅವಳಿಗೆ ಸರಿಯಾಗಿ ಗೊತ್ತೇ ಇರಲಿಲ್ಲ. ಆ ಹುಡುಗನನ್ನು ಇದಕ್ಕೂ ಮೊದಲು ಅವಳು ನೋಡಿದ್ದು ಒಮ್ಮೆ ಮಾತ್ರ . ಒಂದೆರಡು ಬಾರಿ ಮಾತಾಡಿದ್ದಳು ಅಷ್ಟೆ. ಎಲ್ಲವೂ ಬಹಳ ತರಾತುರಿಯಲ್ಲಿ ನಡೆದು, ಅವಳು ಉಸಿರು ಬಿಡುವುದರೊಳಗೆ ಎಲ್ಲವೂ ಮುಗಿದುಹೋಗಿತ್ತು. ಈಗ ಮದುವೆಯಾದ ಆ ಹುಡುಗನೊಂದಿಗೆ ಒಂದು ಗಿರಿಧಾಮಕ್ಕೆ ಬಂದಿದ್ದಳು. ಇಷ್ಟು ದಿನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡ ಇವರು ಈಗ ಯಾರೋ ಗುರುತು ಪರಿಚಯ ಇಲ್ಲದವನ ಜೊತೆ ತಮ್ಮ ಮಗಳನ್ನು ಮದುವೆ ಮಾಡಿ ಈ ರೀತಿ ಅದು ಹೇಗೆ ಇಷ್ಟು ದೂರ ಒಬ್ಬಂಟಿಯಾಗಿ ಕಳುಹಿಸಿದರು ಎಂದು ಮನಸ್ಸಿನಲ್ಲಿ ಅಪ್ಪ ಅಮ್ಮರಿಗೆ ಶಾಪ ಹಾಕುತ್ತಾ ಸುಮ್ಮನೇ ಅವನೆಡೆಗೆ ನೋಡಿತ್ತಾ ಯೋಚಿಸಿದಳು.
"ಈ ಹುಡುಗನಿಗೆ ತನ್ನ ಜೊತೆಗಿರುವವಳು ತನ್ನ ಹೆಂಡತಿ ಎಂದು ಅರ್ಥ ಆಗಿದೆಯೆ. ಅಪರಿಚಿತ ಹುಡುಗಿಯೊಬ್ಬಳನ್ನು ಈ ಹುಡುಗ ಅರ್ಥಮಾಡಿಕೊಳ್ಳುತ್ತಾನಾ, ನನ್ನ ಭಾವನೆಗಳನ್ನು ಗೌರವಿಸುತ್ತಾನಾ, ಪ್ರೀತಿ ಮಾಡುತ್ತಾನಾ, ಬಾಳುತ್ತಾನಾ! "

**************************************************

"ಅಮ್ಮಾ ಈ ರೀತಿ ಎಲ್ಲಾ ಸರಿ ಆಗಲ್ಲ, ದಯವಿಟ್ಟು ನಿಲ್ಲಿಸು ಇದನ್ನ" ಅವಳು ಕೊನೆಯ ಗಳಿಗೆವರೆಗೂ ತನ್ನ ತಾಯಿಗೆ ಹೇಳುತ್ತಲೇ ಇದ್ದರೆ ಅವಳಮ್ಮ ಅದಕ್ಕೆ ಕಿವಿಗೊಡದೆ ಮಗಳಿನ ಕೇಶ ಶೃಂಗಾರದಲ್ಲಿ ತೊಡಗಿದ್ದರು. ರಾತ್ರಿಯೆಲ್ಲಾ ಅತ್ತು ಅತ್ತು ಬಾಡಿದ ಅವಳ ಮುಖಕ್ಕೆ ಪುನಃ ಕಾಂತಿ ತರಿಸುವ ಪ್ರಯತ್ನವೆಂಬಂತೆ ಎರಡು-ಮೂರು ಸಾರಿ ಮೇಕಪ್ ಮಾಡಬೇಕಾಗಿತ್ತು. ಆದರೆ ಈಗ ಬಹಳ ತಡವಾಗಿಹೋಗಿತ್ತು. ಇನ್ನು ಸ್ವಲ್ಪ ಹೊತ್ತಿಗೆ ಅವಳ ಮದುವೆ. ಆ ಮದುವೆಯ ಮುಂಜಾನೆ ಒಂದು ದುಃಸ್ವಪ್ನದಂತೆ ಭಾಸವಾಗಿತ್ತು. ಜೀವನದಲ್ಲಿ ಮೊದಲನೇ ಬಾರಿ ಅವಳಿಗೆ ತಾನು ಯಾರನ್ನಾದರೂ ಪ್ರೀತಿ ಮಾಡಿ ಮದುವೆಯಾಗಬೇಕಿತ್ತು ಎನಿಸಿತ್ತು. ತನಗೆ ಮನಸ್ಸಿಗೆ ಹಿತವೆನಿಸುವ, ಅವನ ಹೆಸರು ಹಿಡಿದು ಕೂಗಿ ತನ್ನ ಗೆಳತಿಯರಿಗೆಲ್ಲಾ ಪರಿಚಯ ಮಾಡಿಕೊಡುವಂತಹ, ನಂಬಿಕೆ ಇರುವಂತಹ ಒಬ್ಬ ಹುಡುಗನನ್ನು ಪ್ರೀತಿಸಿ ಮದುವೆಯಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನಿಸುತ್ತಿತ್ತು. ಅವಳು ಯಾರನ್ನಾದರೂ ಪ್ರೀತಿಸಿ ಅವನನ್ನೆ ಮದುವೆಯಾಗಿತ್ತೇನೆ ಎಂದಿದ್ದರೆ ಅವಳ ತಂದೆ-ತಾಯಿಗಳು ಬೇಡವೆನ್ನುತ್ತಿರಲಿಲ್ಲ. ಆದರೆ ಅವಳು ಇದುವರೆಗೂ ಯಾರನ್ನೂ ಅದರಲ್ಲೂ ಯಾವ ಹುಡುಗನನ್ನೂ ಭಾವನಾತ್ಮಕವಾಗಿ ಹಚ್ಚಿಕೊಂಡಿರಲೇ ಇಲ್ಲ. ತನ್ನ ಗೆಳೆಯರೊಂದಿಗೆ ಸ್ನೇಹದಿಂದ ವರ್ತಿಸುತ್ತಾ , ಆಟ ಆಡುತ್ತಾ, ಕೀಟಲೆ ಮಾಡುತ್ತಾ ಆರಾಮಾಗಿದ್ದಳೇ ಹೊರತು ಯಾರೊಂದಿಗೂ ಆ ರೀತಿಯ ಬೇರೆ ಭಾವನೆಗಳು ಅವಳಿಗೆ ಯಾವತ್ತೂ ಬಂದಿರಲಿಲ್ಲ. ಈಗ ಮದುವೆಯ ವಯಸ್ಸಿಗೆ ಬಂದ ಮೇಲೆ ಸಹಜವಾಗಿಯೇ ಮಗಳಿಗೆ ಹುಡುಗನನ್ನು ಹುಡುಕಿ ಮದುವೆ ಮಾಡುವ ಕರ್ತವ್ಯ ತಂದೆ-ತಾಯಿಯರಿಗೆ ಬಂದಿತ್ತು. ತಮ್ಮ ಮಗಳಿಗೆ ಯೋಗ್ಯ ವರನನ್ನು ಹುಡುಕಲು ಬಹಳ ಕಷ್ಟ ಪಟ್ಟಿದ್ದರು. ಜಾತಿ, ಜಾತಕ, ಒಳ್ಳೆಯ ಕುಟುಂಬ, ಸುರೂಪಿ, ಒಳ್ಳೆ ಆದಾಯ ಹೀಗೆ ಹತ್ತು ಹಲವು ವಿಷಯಗಳ ಆಧಾರದ ಮೇಲೆ ಹುಡುಗನನ್ನು ಹುಡುಕಿದ್ದರು. ಅಂತೂ ಅವರ ಪ್ರಯತ್ನ ೮ ತಿಂಗಳ ನಂತರ ಫಲ ಕೊಟ್ಟಿತ್ತು. ಆದರೆ ಅವಳು ತನ್ನ ತಂದೆಗೆ ಹೇಳಿಬಿಟ್ಟಿದ್ದಳು. ಈ ಹುಡುಗನನ್ನು ನೋಡಿದರೆ ನನಗೆ ಯಾವುದೇ ಭಾವನೆಗಳು ಬರುತ್ತಿಲ್ಲ. ತನಗೆ ಅವನು ದಿನಾ ನೋಡುವ ಹುಡುಗರಂತೆ, ಚಾಟ್ ರೂಮಿನಲ್ಲಿ ಸಿಗುವ ಯಾರೋ ಒಬ್ಬನಂತೆ, ಯಾರೋ ಒಬ್ಬ ಅಪರಿಚಿತ ಮನುಷ್ಯನೇ ಹೊರತು ಬೇರೇನೂ ಅನಿಸಿರಲಿಲ್ಲ. ಅವಳ ತಂದೆ ಇಬ್ಬರನ್ನೂ ಪರಸ್ಪರ ಭೇಟಿಯಾಗಲು ಹೇಳಿದ್ದರು, ನಿಮ್ಮ ಇಷ್ಟ ಕಷ್ಟಗಳನ್ನು ಚರ್ಚಿಸಿ ಒಪ್ಪಿಗೆ ಮಾಡಿಕೊಳ್ಳಿ ಎಂದು ಅವಕಾಶ ಕೊಟ್ಟಿದ್ದರು. ಅದರಂತೆಯೇ ಭೇಟಿಯೋ ಆಯಿತು, ಮಾತಾಡಿಯೂ ಆಯಿತು. ಅದು ಅವಳಿಗೆ ತನ್ನ ಕಂಪನಿಯ ಯಾವುದೋ ಮೀಟಿಂಗಿನಂತೆ, ಸೆಮಿನಾರಿನಂತೆ ಅಷ್ಟೆ ಅನಿಸಿತ್ತು. ಬರುತ್ತಿದ್ದಂತೆ ತಂದೆ ಕೇಳಿದ್ದರು, "ಅವನೊಟ್ಟಿಗೆ ಮಾತಾಡಿದೆಯಾ, ಹೇಗನ್ನಿಸಿತು, ಹುಡುಗ ಒಳ್ಳೆಯವನು ತಾನೆ, ಚೆನಾಗಿ ಮಾತಾಡಿದನೆ?" ಅದೂ ಇದೂ ಕೇಳಿದರು. ಇನ್ನೇನು ಹೇಳುವುದು, ಎಲ್ಲಾದಕ್ಕೂ ಹೂಂ ಎಂದು ತಲೆಯಾಡಿಸಿದ್ದಳು. ಹೇಳುವುದಕ್ಕೆ ಏನಾದರೂ ಇದ್ದರೆ ತಾನೆ ! ಮನಸ್ಸಿನಲ್ಲಿ ಮಾತ್ರ "ಅವನು ಕೊಡಿಸಿದ ಐಸ್ ಕ್ರೀಂ ಒಂದು ಭಾರಿ ಚೆನಾಗಿತ್ತು" ಅಂದುಕೊಂಡು ಸುಮ್ಮನೆ ಎದ್ದು ಬಂದಿದ್ದಳು.

ಅವಳ ತಂದೆ-ತಾಯಿಗಳು, ಬಂಧುಗಳು ಎಲ್ಲಾ ಚರ್ಚಿಸಿ, ಅವಳಿಗೆ ತನ್ನ ಜೀವನ ಸಂಗಾತಿ ಆಗುವವನನ್ನು ಅರ್ಥಮಾಡಿಕೊಳ್ಳಲು ಅವಕಾಶ ಕೊಟ್ಟಾಯಿತು. ಇನ್ನು ಮದುವೆ ಮಾಡಲು ತೊಂದರೆ ಏನಿಲ್ಲ ಎಂದು ನಿರ್ಧರಿಸಿದ್ದರು. ಮದುವೆಯ ಸಿದ್ಧತೆ ಭರದಿಂದ ಸಾಗಿತ್ತು. ನೋಡನೋಡುತ್ತಿದ್ದಂತೆ ಮದುವೆಯ ದಿನ ಬಂದೇ ಬಿಟ್ಟಿತ್ತು. ಮದುವೆಯ ಸಂಭ್ರಮ ಮುಗಿಲು ಮುಟ್ಟಿತ್ತು. ಮದುವೆ ಮನೆಯ ತುಂಬಾ ಜನಗಳು, ಹಬ್ಬದ ವಾತಾವರಣ. ಮದುವೆ ಹಾಲಿನಲ್ಲಿ ಮಕ್ಕಳು ಕುಣಿದು, ಓಡುತ್ತಾ , ಕೂಗಾಡುತ್ತಾ ಆಡುತ್ತಿದ್ದರೆ, ಹೆಂಗಸರಿಗೆಲ್ಲಾ ರೇಷ್ಮೆ ಸೀರೆಯ ಸಂಭ್ರಮ. ಹಿತವಾದ ಗುಲಾಬಿಯ,ಮಲ್ಲಿಗೆಯ ಪರಿಮಳ.. ಸಣ್ಣಗೆ ಕೇಳಿ ಬರುತ್ತಿದ್ದ ಮಂಗಳ ವಾದ್ಯದ ಸದ್ದು, ಮಂತ್ರೋದ್ಘೋಷದ ಮದ್ಯೆ ಅವಳ ಕೊರಳಿಗೆ ತಾಳಿ ಬಿದ್ದಿತ್ತು. ನಂತರ ಯಥಾಪ್ರಕಾರ ಫೋಟೊಗಳಿಗೆ, ವಿಡಿಯೋ ಗೆ ಸಂಬಂಧಿಕರ, ಗೆಳೆಯರ ಜೊತೆ ನಿಂತು ಕೃತಕ ನಗೆ ಬೀರುವುದು ಎಲ್ಲಾ ಮುಗಿದಿತ್ತು. ಈಗ ಅವಳು ಅವನ ಹೆಂಡತಿ. ಸಮಾಜ ಮತ್ತು ಕಾನೂನಿನ ಪ್ರಕಾರ ಅವರಿಬ್ಬರು ದಂಪತಿಗಳು. ತಂದೆ-ತಾಯಿಯರಿಗೆ ತಮ್ಮ ಕರ್ತವ್ಯ ಭಾರ ಇಳಿದಂತೆ ನಿಟ್ಟುಸಿರು ಬಿಟ್ಟಿದ್ದರು. ತುಂಬಿದ ಮದುವೆ ಮನೆಯಿಂದ ಜನರೆಲ್ಲಾ ಒಬ್ಬೊಬ್ಬರಾಗಿ ಖಾಲಿ ಯಾಗಿ ಈಗ ಅವರಿಬ್ಬರೂ ಹೊಸ ಜಗತ್ತಿನ , ಹೊಸ ಬದುಕಿನ ಪ್ರಾರಂಭದಲ್ಲಿ ನಿಂತಿದ್ದರು.

******************************************************************************

"ಬಾ ಇಲ್ಲಿ ಕೂರೋಣ"..ಅವನು ಅವಳ ಕೈಯನ್ನು ಮೃದುವಾಗಿ ಹಿಡಿದೆಳೆಯುತ್ತಾ ಒಂದು ಕಲ್ಲಿನ ಬೆಂಚಿನೆಡೆಗೆ ಕರೆದ. ಆಗಷ್ಟೆ ಬಿದ್ದ ಸಣ್ಣ ಮಳೆಯಿಂದ ಕಲ್ಲು ಬೆಂಚು ಇನ್ನೂ ಸ್ವಲ್ಪ ಒದ್ದೆ ಇತ್ತು .. ಕೂತಾಗ ತಣ್ಣನೆಯೆ ಅನುಭವ.
"ಏನು ಯೋಚನೆ ಮಾಡ್ತಾ ಇದಿಯಾ? ನಿನಗೆ ಈ ಮದುವೆ ಇಷ್ಟ ಇರಲಿಲ್ಲವೇ?"
ಇದ್ದಕ್ಕಿದ್ದಂತೆ ಅನಿರೀಕ್ಷಿತ ಪ್ರಶ್ನೆ ಅವನಿಂದ !
ತಾನು ಉತ್ತರಿಸಬೇಕೆ? ಸುಮ್ಮನಿರಬೇಕೆ? ಏನೂ ಹೇಳಲು ಮನಸ್ಸಾಗುತ್ತಿಲ್ಲ ! ಅವಳ ಮನಸ್ಸು ತಾನು ಹಿಂದಿನ ತಿಂಗಳು ತನ್ನ ಕಂಪನಿಯಲ್ಲಿ ನಡೆಸಿಕೊಟ್ಟ ಒಂದು ಕಾರ್ಯಕ್ರಮದ ಬಗ್ಗೆ ಯೋಚಿಸುತ್ತಿತ್ತು. ಅದರಲ್ಲಿ ಎಲ್ಲರೂ ಕೇಳುತ್ತಿದ್ದ ಪ್ರಶ್ನೆಗಳಿಗೆ ಎಷ್ಟು ವಿಶ್ವಾಸದಿಂದ ನಗುನಗುತ್ತಾ ಉತ್ತರಿಸುತ್ತಿದ್ದೆ. ಈಗೇಕೆ ಆಗುತ್ತಿಲ್ಲ !! ಅವಳು ಉತ್ತರಿಸದೇ ಸುಮ್ಮನೇ ಉಳಿದಳು.
ಅವನೆ ಮುಂದುವರೆಸಿದ .."ನಿನಗೆ ಗೊತ್ತಾ ... ನಾನು ಕೂಡ ಇಂಥಹ ಮದುವೆಗೆ ತಯಾರಿರಲಿಲ್ಲ...."!!
"ಅಯ್ಯೋ ದೇವರೆ .. ಏನಿದು !! ಇದನ್ನು ಅವನೇ ಹೇಳುತ್ತಿದ್ದಾನಾ ಅಥವಾ ನಾನೇ ಯೋಚನೆ ಮಾಡುತ್ತಾ ಜೋರಾಗಿ ಹೇಳಿಬಿಟ್ಟೆನಾ" !! ಅವಳಿಗೇ ತಿಳಿಯಲಿಲ್ಲ.
"ಅವನ ಈ ಮಾತಿನ ಅರ್ಥ ಏನು, ಅವನಿಗೆ ನಾನು ಇಷ್ಟ ಇಲ್ಲವಾ, ಅವನು ಒತ್ತಾಯಪೂರ್ವಕವಾಗಿ ನನ್ನನ್ನು ಮದುವೆಯಾದನೆ ! ಅಥವಾ ನನ್ನ ಮನಸ್ಸಿನ ಯೋಚನೆ ನನ್ನ ಮುಖಭಾವದಿಂದ ಅವನಿಗೆ ತಿಳಿದು ಹೋಯಿತಾ !! "
ಅವನ ಮುಖವನ್ನೇ ನೋಡಿದಳು.
ಅವನು ಕಿರುನಗೆಯೊಂದಿಗೆ ಮುಂದುವರೆಸಿದ...
"ನಾನು ನನ್ನ ಹುಡುಗಿಯನ್ನು ನಾನೇ ಹುಡುಕಿಕೊಳ್ಳಬೇಕು ಅಂತ ಇದ್ದೆ.. ಮನಸ್ಸಿಗೆ ಒಪ್ಪುವಂತಹ ಹುಡುಗಿಯನ್ನು ನೋಡಿ ಪ್ರೀತಿ ಮಾಡಿ ನಾನು ಅವಳ ಜೊತೆ ಸುತ್ತಾಡಬೇಕು, ಅವಳಿಗೆ ಶಾಪಿಂಗ್ ಮಾಡಿಸಬೇಕು,ತಮಾಷೆ ಮಾಡಿ ನಗಬೇಕು, ಅವಳೊಂದಿಗೆ ವಾದ ಮಾಡಬೇಕು, ಸುಖ-ದುಃಖ ಹಂಚಿಕೊಳ್ಳಬೇಕು, ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು, ಒಟ್ಟಿನಲ್ಲಿ ಅವಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು.. ಆಮೇಲೆ ಅವಳನ್ನ ಮದುವೆಯಾಗಿ ಅವಳೊಂದಿಗೆ ಜೀವನ ಮಾಡಬೇಕು ಅಂತ ಆಸೆ ಪಟ್ಟಿದ್ದೆ. ಬೇರೆ ರೀತಿಯ ಮದುವೆ ಏನಿದ್ದರೂ ಎಲ್ಲಾ ಸುಮ್ಮನೆ ನಾಟಕದಂತೆ ಆಗುತ್ತದೆ ಅಂತ ನನ್ನ ಭಾವನೆ ಆಗಿತ್ತು. ನಾನು ಅದಕ್ಕೆ ತಯಾರಿರಲಿಲ್ಲ. ಆದರೆ ನನ್ನ ಕೆಲಸದ ಮೇಲಿನ ಪ್ರೀತಿಯಿಂದ ಅದರಲ್ಲೆ ಮುಳುಗಿಬಿಟ್ಟೆ. ನನಗೆ ನನ್ನ ಹುಡುಗಿಯನ್ನು ಹುಡುಕಿಕೊಳ್ಳಲು ಸಮಯವೇ ಸಿಗಲಿಲ್ಲ. ಅದರ ಬಗ್ಗೆ ಯೋಚನೆ ಮಾಡಲೂ ಮನಸ್ಸು ಬರದೆ ಹೋಯಿತು.ಆದರೆ ಮದುವೆಯ ವಯಸ್ಸು ಆಗುತ್ತಿದ್ದಂತೆ ಮನೆಯಲ್ಲಿ ಹೆಣ್ಣು ಹುಡುಕಲು ಪ್ರಾರಂಭಿಸಿದಾಗಲೇ ನಾನು ಎಚ್ಚೆತ್ತು ಕೊಂಡಿದ್ದು. ಆದರೆ ಆಗ ಸಮಯ ಮಿಂಚಿ ಹೋಗಿತ್ತು. ಕೊನೆಗೆ ನಮ್ಮ ಅಪ್ಪ ಅಮ್ಮ ಯಾರನ್ನು ಹುಡುಕಿತ್ತಾರೋ ಅವಳನ್ನೇ ಮದುವೆಯಾಗುವುದು ಎಂದುಕೊಂಡು ಸುಮ್ಮನಾಗಿಬಿಟ್ಟೆ. ಅದನ್ನು ಬಿಟ್ಟು ಬೇರೇ ಏನನ್ನೂ ಮಾಡಲು ನನ್ನಿಂದ ಸಾದ್ಯವಿರಲಿಲ್ಲ. ಮದುವೆಗೆ ಮುಂಚೆ ನಮಗೆ ಮಾತನಾಡಲು ಅವಕಾಶ ಕೊಟ್ಟಾಗ ನಿನಗೆ ನನ್ನೊಂದಿಗೆ ಮಾತಾಡುವುದು, ಸಮಯ ಕಳೆಯುವುದು ಕಷ್ಟ, ಕಿರಿಕಿಯಾಗುತ್ತಿದ್ದುದು ನನಗೆ ಅರ್ಥ ಆಗುತ್ತಿತ್ತು. ಒಟ್ಟಿನಲ್ಲಿ ಈ ರೀತಿ ಅಪರಿಚಿತನೊಂದಿಗೆ ಇದ್ದಕ್ಕಿದ್ದಂತೆ ಬದುಕನ್ನು ಹೊಂದಿಸಿಕೊಳ್ಳಲು ನಿನಗೆ ಇಷ್ಟವಿಲ್ಲದಿರುವುದು ತಿಳಿಯುತ್ತಿತ್ತು. ಏಕೆಂದರೆ ನನಗೂ ಅದೇ ರೀತಿ ಆಗುತ್ತಿತ್ತು. ನಾವಿಬ್ಬರೂ ಅಪರಿಚಿತರು. ಆದರೆ ಏನು ಮಾಡುವುದು , ನನಗೆ ನಿನ್ನನ್ನು ಸಾಕಷ್ಟು ಅರ್ಥ ಮಾಡಿಕೊಳ್ಳಲು ಆ ಸಮಯದಲ್ಲಿ ಸಾಧ್ಯವಿರಲಿಲ್ಲ. ನನ್ನ ಬಗ್ಗೆ ನಿನಗೆ ನಂಬಿಕೆ ಬರಿಸಲು, ನಿನಗೆ ನನ್ನ ಬಗ್ಗೆ ತಿಳಿಸಲು ಆ ಸಮಯದಲ್ಲಿ ಸಾಧ್ಯವಿರಲಿಲ್ಲ. ಎಲ್ಲವೂ ತರಾತುರಿಯಲ್ಲಿ ನಡೆದು ಹೋಯಿತು. ಆದರೆ ಈಗಲೂ ಕಾಲ ಮಿಂಚಿಲ್ಲ. ನನ್ನ ಮುಂದೆ ಇನ್ನೂ ಅಗಾಧವಾಗ ಜೀವನವಿದೆ. ಅದರಲ್ಲಿ ನಿನ್ನನ್ನು ಪ್ರೀತಿಸಲು, ನೋಡಿಕೊಳ್ಳಲು, ನಿನ್ನ ನಂಬಿಕೆಯಲ್ಲಿ ಬದುಕಲು ಬೇಕಾದಷ್ಟು ಸಮಯವಿದೆ. ನಾನು ಇದುವರೆಗೂ ಹುಡುಕುತ್ತಿದ್ದ ಹುಡುಗಿ ಯಾರೋ ಅಲ್ಲ. ಅದು ನೀನೆ ಅಂದು ಕೊಳ್ಳುತ್ತೇನೆ".

ಅವನು ಅವಳ ಕಣ್ಣುಗಳನ್ನೆ ಆಳವಾಗಿ ನೋಡುತ್ತಾ ಕೇಳಿದ.

" ಈಗ ಹೇಳು ನೀನು ನನ್ನನ್ನು ಪ್ರೀತಿಸ್ತೀಯಾ?"

ಅವಳ ಕಣ್ಣಿಂದ ನೀರ ಹನಿಯೊಂದು ಜಾರಿತು. ತನ್ನ ತಂದೆ-ತಾಯಿಗಳು ತನಗೆ ನಿಜವಾಗಿಯೂ 'ಯೋಗ್ಯ' ಹುಡುಗನನ್ನೇ ಹುಡುಗನನ್ನೆ ಹುಡುಕಿದ್ದಾರೆ ಅನ್ನಿಸಿತು. ಮನಸ್ಸಿನಲ್ಲಿಯೇ ಅಪ್ಪ-ಅಮ್ಮರಿಗೆ ನಮಸ್ಕಾರ ಮಾಡಿದಳು."ನನ್ನನ್ನು ಪ್ರೀತಿಸುತ್ತೀಯಾ" ಎಂದು ಅವನು ಕೇಳಿದ ಪ್ರಶ್ನೆಗೆ ಉತ್ತರ ಕೊಡುವ ಅಗತ್ಯ ಕಾಣಿಸಲಿಲ್ಲ. ಇಬ್ಬರಿಗೂ ಅದರ ಉತ್ತರ ತಿಳಿದಿತ್ತು.

ಅವನು ಅವಳ ಹೆಗಲ ಮೆಲೆ ಕೈ ಹಾಕಿ, ಅವಳು ಅವನ ಭುಜಕ್ಕೊರಗಿ ನಡೆಯುತ್ತಿದ್ದರೆ ಮುಳುಗುತ್ತಿದ್ದ ಸೂರ್ಯ ಅಲ್ಲಿ ಪ್ರಾರಂಭಗೊಂಡ ಹೊಸ ಬದುಕೊಂದಕ್ಕೆ ಸಾಕ್ಷಿಯಾಗಿದ್ದ. ಹಿತವಾದ ತಂಗಾಳಿ ಬೀಸುತ್ತಾ ಮರಗಿಡಗಳು ತೂಗಾಡುತ್ತಾ ಪ್ರಕೃತಿಮಾತೆ ಹೊಸ ದಾಂಪತ್ಯಕ್ಕೆ ಎದೆತುಂಬಿ ಹಾರೈಸಿದ್ದಳು.

Monday, July 30, 2007

ಹೀಗೊಂದು ಸಂಜೆ...

ಪಾರ್ಕಿನ ಗೇಟಿಗೆ ಸಮೀಪದಲ್ಲಿದ್ದ ಕಲ್ಲುಬೆಂಚಿನ ಮೇಲೆ ಕುಳಿತಿದ್ದ ಅವಳ ತೊಡೆಯ ಮೇಲೆ ಅವನ ಕೈ, ಅವನ ಕೈ ಮೇಲೆ ಅವಳ ಕೈ. ಅವಳ ಬೆರಳುಗಳು ಅವನ ಬೆರಳುಗಳೊಡನೆ ಆಟವಾಡುತ್ತಿದ್ದವು. ಕಳೆದ ಅರ್ಧ ಗಂಟೆಯಿಂದ ಅವರಿಬ್ಬರ ನಡುವೆ ಮಾತಿಲ್ಲ, ಕಥೆಯಿಲ್ಲ. ಬರಿ ಬೆರಳುಗಳೊಂದಿಗೆ ಬೆರಳಾಟ, ಮನದಲ್ಲಿ ಭಾವನೆಗಳ ಹೊಯ್ದಾಟ, ಮನದಲ್ಲಿ ಮೂಡಿದ ಭಾವನೆಗಳು ಮಾತುಗಳಾಗುತಿಲ್ಲ. ಇಬ್ಬರ ಕಣ್ಣು-ಕಣ್ಣುಗಳು ಸಂಧಿಸಿದವು. ಇಬ್ಬರಿಗೂ ಭಾವನೆಗಳ ಪ್ರಾವಾಹದಲ್ಲಿ ತೆಲಿ ಹೋದಂತಾಯಿತು. ಮೊದಲು ಹತೋಟಿಗೆ ಬಂದವಳು ಅವಳೇ, ಅವನ ಕೈಯನೊಮ್ಮೆ ಅದುಮಿ, ಸಮಾಧಾನ ಮಾಡಿಕೊಳ್ಳೆಂದು ಕಣ್ಣಲ್ಲೇ ಹೇಳಿದಳು. ಅವನಿಗಿನ್ನೂ ಕಣ್ಣೀರು ತಡೆದಿಟ್ಟುಕೊಳ್ಳಲಾಗಲಿಲ್ಲ. ಕಣ್ಣೀರ ಹನಿ ಕೆನ್ನೆಯಿಂದಿಳಿದು ಕೈ ಮೇಲೆ ಬಿದ್ದಾಗಲೆ ಅವನಿಗೆ ಗೊತ್ತಾಗಿದ್ದು ತಟ್ಟನೆ ಕಣ್ಣೀರನ್ಣೊರೆಸಿಕೊಂಡು, "ತುಂಬಾ ಕಣ್ಣುನೋವೂ, ಇತ್ತಿಚಿಗೆ ಕಣ್ಣಿಂದ ನೀರು ತನ್ನಿಂದ ತಾನೇ ಹಾಗೆ ಬರುತ್ತವೆ" ಅಂದ ಅವರಿಬ್ಬರ ನಡುವೆ ಸಂಭಾಷಣೆ ಹೀಗೆ ಶುರುವಾಗಿತ್ತು

ಅವಳು ತನ್ನ ಕಣ್ಣಂಚಿಗೆ ಬಂದು ನಿಂತಿದ್ದ ಕಣ್ಣೀರ ಹನಿಗಳನ್ನು ತನ್ನ ಪುಟ್ಟ ಹಂಸಬಿಳುಪಿನ ಕೈವಸ್ತ್ರದಿಂದ ಹತ್ತಿಕ್ಕಿಕೊಂಡು, ಕಣ್ಣಲ್ಲಿ ಕಸ ಬಿದ್ದಿದೆಯೇನೋ ಎಂಬಂತೆ ಒರೆಸಿಕೊಂಡಳು, "ರಾಕ್ಷಸ ಕಣೋ ನೀನು, ಕೆಲಸಕ್ಕೆ ಅಂತ ಕುಳಿತರೆ ಏಳೋದೇ ಇಲ್ಲ, ಯಾವುದಾದರೂ ಪುಸ್ತಕ ಕೈಗೆ ಸಿಕ್ಕರೆ ಅದನ್ನು ಮುಗಿಸಿ ಎಲೋ ವರೆಗೂ ಕಣ್ಣಿನ ರೆಪ್ಪೆಗಳನ್ನು ಬಡಿಯೋದಿಲ್ಲ. ಇವಾಗಲಾದ್ರೂ ಸರಿಯಾಗಿ ನಿದ್ರೆ ಮಾಡ್ತೀಯೋ ಇಲ್ವೋ, ಗೂಬೆ ಜಾತಿಯೋನೇ", ಎನ್ನುತ್ತಾ ಎದೆಯಾಳದಿಂದ ಬಾರದ ನಗೆಯನ್ನು ತುಟಿಗೆ ತರುವ ಯತ್ನ ಮಾಡಿದಳು. ಅವನು ಕೂಡ ಅದೇ ಪ್ರಯತ್ನದಲ್ಲಿ, "ನನ್ನ ಕಣ್ಣಿಗೆ ನಂಬರ ಬರದಿದ್ದರು, ನನ್ನ ಸುತ್ತಳತೆ ಸಾಕಷ್ಟು ಬೆಳದಿದೆ, ಅದಕ್ಕೆ ತಕ್ಕಂತೆ ನಿನ್ನ ಕನ್ನಡಕದ ನಂಬರ್ ಏರಿದೆ" ಎಂದ.

ಇಬ್ಬರು ಬಾರದ ನಗೆಯನ್ನು ತುಟಿಗೆ ತರಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗಲೇ, ಕಾಲೇಜಿನಿಂದ ನೇರವಾಗಿ ಪಾರ್ಕಿಗೆ ಬಂದ ಒಂದು ಜೋಡಿ ಅವರ ಪಕ್ಕದಲ್ಲಿಯೇ ಬೈಕ ನಿಲ್ಲಿಸಿ. ಕೈ-ಕೈ ಹಿಡಿದು ಪಾರ್ಕಿನ ಗಿಡ-ಮರಗಳ ನಡುವೆ ಮರೆಯಾದರು. ಅದನ್ನು ಕಂಡ ಅವರಿಬ್ಬರ ಕಣ್ಣುಗಳಲ್ಲಿ ಹೇಳಲಾಗದ ಮಂದಹಾಸವೊಂದು ಮೀನುಗಿ, ಮೂಡಿದಷ್ಟೇ ವೇಗವಾಗಿ ಕರಗಿಹೋಯಿತು. ಇಲ್ಲಿಯವರೆಗೂ ಕೂತಿದ್ದ ಕಲ್ಲು ಬೆಂಚಿನ ಮೇಲೆ ಈಗ ಕುಳಿತುಕೊಳ್ಳಲಾಗದೇ ಚಡಪಡಿಸಿದರು. ಅದು ಇಬ್ಬರಿಗೂ ಅರ್ಥವಾಗಿ ಅಲ್ಲಿಂದೆದ್ದು ಪಾರ್ಕಿನ ಗೆಟನ್ನು ದಾಟಿ ರಸ್ತೆಗೆ ಬಂದರು. ಕಣ್ಣಲ್ಲೇ ನೂರಾರು ಮಾತು ಮಾತನಾಡಿ, ಕಣ್ಣಲ್ಲೇ ವಿದಾಯ ಹೇಳಿ ಅವನು ಎಡಕ್ಕೂ ಮತ್ತು ಅವಳು ಬಲಕ್ಕೂ ತಿರುಗಿ ಹೋರಟರು.

ಹತ್ತು ಹೆಜ್ಜೆ ನೆಡದ ಅವಳು ಅಲ್ಲಿಯೇ ಹಿಂದೆ ತಿರುಗಿ ನಿಂತಳು. ಅವನು ಹಿಂತಿರುಗಿ ನೋಡುವನೇನೋ ಎಂದು ಕಾದಳು. ಅವನು ತನ್ನಷ್ಟಕ್ಕೆ ತಾನೇ ಏನೋ ಮಾತನಾಡುತ್ತಾ ಹಾಗೆ ಹೊರಟಿದ್ದ. ಅವಳು ಸ್ವಲ್ಪ ಹೊತ್ತು ಕಾಯ್ದು, "ಇವತ್ತಿಗೂ ಇವನು ಏನು ಬದಲಾಗೆ ಇಲ್ಲ" ಎಂದುಕೊಳ್ಳುತ್ತಾ ನಿಟ್ಟುಸಿರು ಬಿಟ್ಟಳು.

ಅವನಿಗೆ ಹೋಗುತ್ತಾ ಒಮ್ಮೆ ಹಿಂತಿರುಗಿ ನೋಡಬೇಕೆನಿಸಿತು......ಮತ್ತೊಮ್ಮೆ ಅವಳ ಶಾಂತ ಸರೋವರಕ್ಕೆ ಕಲ್ಲೇಸೆದು ಕದಡುವ ಪ್ರಯತ್ನ ಬೇಡವೆಂದು ತನ್ನ ಮನಸ್ಸಿಗೆ ಬುದ್ಡಿ ಹೇಳುತ್ತಾ, ಒಮ್ಮೆ ಬೈಯುತ್ತಾ, ಮತ್ತೊಮ್ಮೆ ರಮಿಸುತ್ತಾ ಆ ಅಜ್ಜನು ಹಾಗೆಯೇ ಕಾಲೇಳೆಯುತ್ತಾ ಮುನ್ನೇಡದ. ಅಲ್ಲಿಯೇ ನಿಂತಿದ್ದ ಅಜ್ಜಿ ಮತ್ತೊಮ್ಮೆ ತನ್ನ ಹಂಸಬಿಳುಪಿನ ಕೈವಸ್ತ್ರವನ್ನು ಮುಖಕ್ಕೆ ಹತ್ತಿರ ತಂದಳು.


- ಈರಣ್ಣ ಶೆಟ್ಟರ

ಹೊಸ ಅಂಗಿ

ನಾನು ೧೯೭೭ರಲ್ಲಿ ಹಿರಿಯೂರಿನಲ್ಲಿ ಸರ್ಕಾರಿ ಬಾಲಕರ ಕಿರಿಯರ ಪ್ರಾಥಮಿಕ ಪಾಠ ಶಾಲೆಯಲ್ಲಿ ಮೂರನೆಯ ತರಗತಿಯಲ್ಲಿ ಓದುತ್ತಿದ್ದಾಗ ಈ ಘಟನೆ ನಡೆಯಿತು. ನಮ್ಮ ಶಾಲೆಯಲ್ಲಿದ್ದಂತಹ ವಿದ್ಯಾರ್ಥಿಗಳಲ್ಲಿ ಬಹುತೇಕರು ಆರ್ಥಿಕವಾಗಿ ತೀರಾ ಹಿಂದುಳಿದ ಹಿನ್ನೆಲೆಯಿಂದ ಬಂದವರಾದ್ದರಿಮ್ದ ಎಷ್ಟೋ ಸಮಯ ಬಹಳಷ್ಟು ಜನರಿಗೆ ಬಟ್ಟೆಬರೆ ಚೆನ್ನಾಗಿರುತ್ತಿರಲಿಲ್ಲ. ನನ್ನ ಮನೆಗೆ ಹತ್ತಿರವೇ ಮನೆ ಇದ್ದ ಸಹಪಾಠಿಯೊಬ್ಬ ಪ್ರತಿದಿನ ಶಾಲೆಯಿಂದ ಹಿತಿರುಗುವಾಗ ನನ್ನನ್ನು ಬಹಳಷ್ಟು ಬಲವಂತ ಮಾಡಿ ಇಡೀ ಶಾಲೆಯಲ್ಲಿ ನನ್ನ ಬಳಿ ಮಾತ್ರ ಇದ್ದಂತಹ ಅಲ್ಯೂಮೀನಿಯಂ ಸ್ಕೂಲ್ ಟ್ರಂಕನ್ನು ಹಿಡಿದುಕೊಂಡು ಬರುತ್ತಿದ್ದ. ಅವನ ಚೀಲವನ್ನು ನಾನು ಹಿಡಿದುಕೊಳ್ಳಬೇಕಾಗುತ್ತಿತ್ತು. ತಾನು ಟ್ರಂಕನ್ನು ಹಿಡಿದುಕೊಂಡು ಬರುತ್ತಿದ್ದೇನೆ ಎನ್ನುವುದೇ ಅವನಿಗೆ ಅತ್ಯಂತ ಸಂತಸದ ವಿಷಯವಾಗಿತ್ತು!

ನಾನೊಂದು ದಿನ ಹೊಸ ಬಟ್ಟೆಯನ್ನು ಧರಿಸಿಕೊಂಡು ಶಾಲೆಗೆ ಹೋದೆ. ಗಂಟೆ ಬಾರಿಸಲು ಸಮಯ ಇನ್ನೂ ಬಹಳಷ್ಟಿತ್ತು. ವಿದ್ಯಾರ್ಥಿಗಳು ಹೆಚ್ಚು ಬಂದಿರಲಿಲ್ಲ. ಅಂದು ಹೊಸ ಬಟ್ಟೆ ಧರಿಸಿದ ಹುರುಪಿನಲ್ಲಿ ಶಾಲೆಗೆ ನಾನು ಬಹಳ ಮುಂಚೆಯೇ ಹೋಗಿ ಬಿಟ್ಟಿದ್ದೆ! ಶಾಲೆಯ ಹಿಂದೆ ಶಾಲೆಗೆ ಸೇರಿದ್ದ ಸಣ್ಣದೊಂದು ಕೈತೋಟವಿತ್ತು ಸುಮ್ಮನೇ ಅಲ್ಲಿಗೆ ಹೋದೆ. ಅಲ್ಲಿ ನನ್ನ ಟ್ರಂಕ್ ಗೆಳೆಯ ನೇರಳೇ ಹಣ್ಣು ತಿನ್ನುತ್ತಾ ಕುಳಿತಿದ್ದ. ನನ್ನನ್ನು ನೋಡಿ ನನಗೂ‌ ನೇರಳೇ ಹಣ್ಣನ್ನು ಕೊಟ್ಟ. ಆಗ ಸಹಜವಾಗಿ ಅವನ ದೃಷ್ಟಿ ನಾನು ಧರಿಸಿದ ಅಂಗಿಯ ಮೇಲೆ ಹರಿಯಿತು. ಅದರ ಬಣ್ಣ ಅವನಿಗೆ ತುಂಬಾ ಮೆಚ್ಚುಗೆಯಾಯಿತು. ಒಂದೇ ಒಂದು ಕ್ಷಣ ನಿನ್ನ ಅಂಗಿಯನ್ನು ಹಾಕಿಕೊಂಡು ನೋಡಿ ಕೊಡುತ್ತೇನೆ ಬಿಚ್ಚಿಕೊಡು ಎಂದು ಅವನು ಹೇಳಿದ್ದಕ್ಕೆ ಬಿಚ್ಚಿಕೊಟ್ಟೆ. ನನ್ನ ಅಂಗಿಯನ್ನು ಅವನು ಧರಿಸಿದ ಕೂಡಲೇ ತನ್ನ ಕೈ ಚೀಲವನ್ನು ಬಿಸುಟು ನಾಗಾಲೋಟದಿಂದ ಓಡಿಹೋದ. ನಾನು ಕೂಗಿದರೂ ನಿಲ್ಲಲಿಲ್ಲ! ನಾನು ಬರಿಯ ಚೆಡ್ಡಿ ಹಾಗೂ ಬನಿಯನ್ನಿನಲ್ಲಿ ಸ್ಕೂಲ್ ಟ್ರಂಕನ್ನು ಹಿಡಿದುಕೊಂಡು ನಿಂತಿದ್ದೆ (ಈಗ ಇದನ್ನು ನೆನಪಿಸಿಕೊಂಡಾಗಲೆಲ್ಲಾ ನಗು ಬರುತ್ತದೆ) ನನಗೆ ಅವನ ಮೇಲೆ ಕೋಪ ಬಂದಿತು. ನನ್ನ ಟ್ರಂಕ್ ನೊಂದಿಗೆ ಅವನು ಬಿಸುಟಿದ್ದ ಚೀಲವನ್ನೂ ಹಿಡಿದುಕೊಂಡು ಅವನ ಮನೆಯ ಕಡೆ ನಡೆಯತೊಡಗಿದೆ. ನಾನು ಅರ್ಧ ದಾರಿಯೂ ಸಹ ಕ್ರಮಿಸುವ ಮೊದಲೇ, ಅವನು ಯಾವ ವೇಗದಲ್ಲಿ ಓಡಿ ಹೋಗಿದ್ದನೋ ಅದೇ ವೇಗದಲ್ಲಿ ಓಡಿ ಬರುತ್ತಿದ್ದ! ನನ್ನನ್ನು ಕಂಡಕೂಡಲೇ ನಿಂತು ಏದುಸಿರು ಬಿಡುತ್ತಾ 'ಗುರು, ನಿನ್ನ ಅಂಗಿಯನ್ನು ನಮ್ಮಮ್ಮನಿಗೆ ತೋರಿಸಲು ಹೋಗಿದ್ದೆ ಚೆನ್ನಾಗಿದೆ ಅಂದ್ರು ನನಗೂ‌ ಹಬ್ಬಕ್ಕೆ ಇಂಥದನ್ನೇ ಕೊಡುಸ್ತಾರಂತೆ' ಎಂದು ಸಂತಸದಿಂದ ಹೇಳಿದ.

ಅಂದು ಚಿಕ್ಕ ವಯಸ್ಸಿನ ನನಗೆ ಅವನ ಸಂತಸ ಅರ್ಥ ಮಾಡಿಕೊಳ್ಳುವ ಶಕ್ತಿ ಇರಲಿಲ್ಲ. ಬನಿಯನ್ನಿನಲ್ಲಿ ನಿಲ್ಲಿಸಿದನಲ್ಲ ಎನ್ನುವ ಕೋಪದಿಂದ ಅವನನ್ನು ಹೀನಾಮಾನ ನಿಂದಿಸಿದೆ. ನಾನು ನಿಂದಿಸಿದರೂ ಹೊಸ ಅಂಗಿ ಧರಿಸದೆ ಹೊಸ ಅಂಗಿ ಬರುತ್ತದೆಂಬ ಸಂತಸ ಅವನಲ್ಲಿ ಕಡಿಮೆಯಾಗಲಿಲ್ಲ!

ಇಂದು ಅವನು ಎಲ್ಲಿದ್ದಾನೋ ನನಗೆ ತಿಳಿದಿಲ್ಲ, ತೀರಾ ದುರ್ಬಲವಾದ ಆರ್ಥಿಕ ನೆಲೆಗಟ್ಟಿನಿಂಡ ಬಂದಿದ್ದ ಅವನಿಗೆ ನನ್ನ ಹೊಸ ಅಂಗಿಯನ್ನು ಧರಿಸಿ ಪಡೆದ ಆನಂದದ ಕ್ಷಣ ನನ್ನಲ್ಲಿ ಶಾಶ್ವತವಾಗಿ ನೆಲೆಯೂರಿದೆ.

ಈ ಅನುಭವ ಕಥನ ೨೦೦೧, ಜನವರಿಯ 'ಕಸ್ತೂರಿ' ಮಾಸಿಕದಲ್ಲಿ 'ಇದುವೆ ಜೀವ... ಇದು ಜೀವನ' ಎಂಬ ಕಾಲಂನಲ್ಲಿ ಪ್ರಕಟವಾಗಿತ್ತು
- ಟಿ ಎಸ್ ಗುರುರಾಜ

Monday, July 23, 2007

ಭೂಮಿ ತೂಕದವಳು……………!!!!


ಇದ್ದಿದ್ದೆ ಒಂದು ಚಿಕ್ಕ ಗುಡಿಸಲು, ಗುಡಿಸಿಲ ಮೇಲೆ ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಇದೆಯೋ ಇಲ್ಲವೋ ಅನ್ನುವಷ್ಟು ಹುಲ್ಲು.ಈಗಲೋ ಆಗಲೋ ಧರೆಗುರುಳಲೂ ಸರತಿ ಸಾಲಿನಲ್ಲಿ ನಿಂತಿರುವ ಆ ಮನೆಯ ಬಿರುಕು ಬಿಟ್ಟ ಗೋಡೆಗಳು,ರಾತ್ರಿ ಮಳೆ ಬಂತೆಂದರೆ ಮನೆಯೊಳಗೆ ಈಜಾಡಬಹುದಾದಷ್ಟು ನೀರು ಮನೆಯ ಒಳಗೆ ಜಮಾವಣೆಯಾಗುತ್ತಿತ್ತು…ಇದ್ದ 3 ಜನಮಕ್ಕಳನ್ನು ರಾತ್ರಿ ಒಂದು ಬದಿಗೆ ಕೂರಿಸಿ ತಾನು ಮನೆಯ ಒಳಗಿದ್ದ ಅಷ್ಟೂ ನೀರನ್ನ ಹೊರಗೆ ಹಾಕಿ ಮಕ್ಕಳನ್ನೆಲ್ಲ ಹೇಗೋ ಮನೆಯ ಒಳಗೆ ಮಲಗಿಸಿ ತಾನು ತೂಕಡಿಸುತ್ತ ಮನೆಯ ಹೊರಗೆ ಕುಳಿತರೇ…”ಯಾವ ಮಿಂಡ ಬರ್ತಾನೆ ಅಂತ ಕಾಯ್ತ ಇದ್ದೀಯೇ ಹಾದರಗಿತ್ತೀ” ಅಂತಲೇ ತೂರಾಡುತ್ತ ಬರುವ ಕುಡುಕ ಗಂಡನ ಬೈಗುಳ ಕೇಳಿದೊಡನೆ ಕಣ್ಣೀರಾಗುವ ತಾಯಿ ಗಂಡನ ಬೈಗುಳಗಳಿಗೆ ಸೊಪ್ಪು ಹಾಕದೆ ಕುಡಿದು ತೂರಾಡುತ್ತಿದ್ದ ಗಂಡನನ್ನ ನಿಧಾನವಾಗಿ ಬೀಳದಂತೆ ಮನೆಯ ಒಳಕ್ಕೆ ಕರೆದುಕೊಂಡು ಹೋಗಿ ಕೂರಿಸಿ ಉಣ್ಣಲಿಕ್ಕೆ ಬಡಿಸಿದರೇ..”ಯಾಕೆ ಇಷ್ಟೇ ಅನ್ನ ಇದೆ? ಎಲ್ಲ ನಿನ್ ಮಿಂಡ ತಿಂದು ಹೋಗಿ ಬಿಟ್ನ? ಅಂತ ಹೇಳಿ ಬೆಂಕಿಕೊಳ್ಳಿಯನ್ನ ತೆಗೆದು ಗುಬ್ಬಿ ಗಾತ್ರದ ತಾಯಿಗೆ ಬಡಿದನೆಂದರೇ ತಾಯಿ ಜೋರಗಿ ಕೂಗುವಂತೆಯೂ ಇಲ್ಲ .ಅಕ್ಕ ಪಕ್ಕದ ಮನೆಯವರಿಗೇ ಗೊತ್ತಾದರೇ?..” ಇಲ್ಲ ಕಣ್ರಿ ಇದ್ದಿದ್ದೆ ಪಾವು ಅಕ್ಕಿ ಅದನ್ನೆ ಮಾಡಿದ್ದು ಅಷ್ಟೆ” ಅಂತ ತಾಯಿ ಕಣ್ಣೀರಾದರೇ ಅದ್ಯವುದರ ಪರಿವೇ ಇಲ್ಲದಂತೆ ದನಕ್ಕೆ ಬಡಿದ ಹಾಗೆ ಬಡಿದು ಅಂತ ಮಳೆಗಾಲದ ಚಳಿಮಳೆಯಲ್ಲಿ ಮನೆಯಿಂದ ಹೊರಗೆ ಕಳುಹಿಸುತ್ತಿದ್ದ ತಾಯಿಯನ್ನ. ಮುದುರಿ ಮಲಗಿರುವ ಮಕ್ಕಳು ತುಟಿ ಕಚ್ಚಿ ಹಿಡಿಯ ಬೇಕಿತ್ತು ದುಃಖ… ಮಕ್ಕಳತ್ತರೇ ಮಕ್ಕಳಿಗೂ ಅದೇ ಗತಿ ಕೈಗೆ ಸಿಕ್ಕಿದನ್ನ ತೆಗೆದುಕೊಂಡು ಬಾರಿಸುತ್ತಿದ್ದ…ಆದರೂ ದೈರ್ಯ ಮಾಡಿ ಇದ್ದ ಒಬ್ಬ ಮಗ ” ಅಪ್ಪಾ ಅವ್ವಾಗೆ ಚಳಿ ಆಕೈತಿ ಒಳಕ್ಕೆ ಕರಿಲಾ ಅವ್ವನ್ನ?” ಅಂತ ಮೈ ನಡುಗುತ್ತ ಕೇಳಿದರೇ..” ಗೊತ್ತಲೆ ಸೂಳೆ ಮಗನೇ ನೀನು ನಿಮ್ಮವ್ವನ ಪರ ನೀನು ಹೊರಗೆ ಹೋಗಿ ಸಾಯಿ ನಿಮ್ಮವ್ವನ ಜೊತೆ” ಅಂತ ಹೇಳಿ ಮಗನನ್ನು ಅಂತ ಚಳಿಮಳೆಯಲ್ಲಿ ಹೊರಗೆ ಕಳುಹಿಸುತ್ತಿದ್ದ.. ಅಂತ ಚಳಿಮಳೆಯಲ್ಲಿ ಅಮ್ಮನಿಗೆ ಮಗ ಮಗನಿಗೆ ಅವ್ವ ಮಾತ್ರ ಸಮಧಾನ ಹೇಳಿ ಆ ಯಾತನಮಯ ರಾತ್ರಿಯನ್ನ ಕಳೆಯುತ್ತಿದ್ದರು…!ಅಂತ ಸಮಯದಲ್ಲಿ ಆ ದೇವರಾದವನು ಎಲ್ಲಿ ಹುಲ್ಲು ಮೆಯ್ಯುತ್ತಿದ್ದನೊ….

ಮಗಳೇ ಕಾಪೀ ಕೊಡು ಅಂತ ತನ್ನ ಮುದ್ದಿನ ಇಬ್ಬರೂ ಹೆಣ್ಣುಮಕ್ಕಳನ್ನ ಕೇಳುತ್ತಿದ್ದ ಬೆಳಗ್ಗೆ ಎದ್ದ ಕೂಡಲೇ.. ” ಹೋಗಪ್ಪ ನನಗೆ ಬೆಂಕಿ ಒಟ್ಟೋಕೆ ಬರಕಲ್ಲ ಕಾಪೀ ಮಾಡಾಕು ಬರಾಕಲ್ಲ ಅವ್ವನಿಗೆ ರಾತ್ರಿ ಹಂಗೆ ಹೊಡೆದು ಮನೆಯಿಂದ ಹೊರಗೆ ಕಳ್ಸಿದೆ, ನಾವ್ ಮಾಡಿಕೊಡಕಲ್ಲ ಹೋಗು ಅಂತ ಮುದ್ದಿನ ಹೆಣ್ಣು ಮಕ್ಕಳೂ ಹೇಳಿದರೇ” ತಲೆ ತಗ್ಗಿಸಿದ ಅಪ್ಪ ತಲೆ ಮೇಲೆತ್ತುತ್ತಿರಲಿಲ್ಲ .ಯಾವ ಮುಖವಿಟ್ಟಾದರೂ ತನ್ನಿಬ್ಬರು ಹೆಣ್ಣುಮಕ್ಕಳನ್ನ ನೋಡಿಯಾನು?..ತಗ್ಗಿಸಿದ ತಲೆ ತಗ್ಗಿಸಿಕೊಂಡೆ ಮತ್ತೆ ಮನೆಯಲ್ಲಿ ಅವ್ವ ಯಾರಿಗೂ ಕಾಣದಂತಹ ಛಹಾ ಡಬ್ಬಿಗಳಲ್ಲಿ ಮತ್ತೆ ಕಾರದ ಪುಡಿ ಡಬ್ಬಿಗಳಲ್ಲಿ ಅಡಗಿರಿಸುತ್ತಿದ್ದ ಚಿಲ್ರೆ ಕಾಸುಗಳನ್ನ ಸೇರಿಸಿ ತನ್ನ ಜೇಬಿಗಿಳಿಸಿಕೊಂಡು ಮನೆಯಿಂದ ಹೊರಕ್ಕೆ ಹೋದಮೇಲೆಯೇ ತನ್ನ ನೀಚ ತಲೆಯೆತ್ತುತ್ತಿದ್ದ.ಅದೇ ಚಿಲ್ಲರೇ ಕಾಸನ್ನ ಚೌಡಮ್ಮನ ಮನೆನಲ್ಲಿ ಎರೆಡು ಕ್ವಾಟರ್ ಸಾರಾಯಿ ಕುಡಿದುಕೊಂಡು ಬಂದು ತನ್ನ ಪೌರುಷವನ್ನ ಮತ್ತೆ ಮಕ್ಕಳ ಮುಂದೆ ತೋರಿಸುತ್ತಿದ್ದ… ” ಎಲ್ಲೆ ನಿಮ್ಮವ್ವ ರಾತ್ರಿ ಮನೆಯಿಂದ ಹೊರಗೆ ಹೋದವಳು ಇನ್ನು ಬಂದಿಲ್ಲವಲ್ರೆ? ಯಾರ ಜೊತೆಗೆ ಹೋದ್ಲು ” ಅಂತ ಕೇಳಿದರೇ… ” ಅವ್ವ ಸಾವಕಾರ್ ಗದ್ದೆ ಗೆ ಸಸಿ ಕೀಳಾಕೆ ಹೋದ್ಲು ಬೆಳಗ್ಗೆ ೫ ಗಂಟೆಗೆನೆ” ಅಂತ ಮಕ್ಕಳು ಹೇಳಿದ ಕೂಡಲೇ ಸಾವಕಾರ್ ಗದ್ದೆಗೆ ತೂರಾಡುತ್ತ ಹೋಗೇ ಬಿಡುತ್ತಿದ್ದ..ಅಲ್ಲಿ ಆ ಚಳಿಮಳೆಯಲ್ಲಿ ರಾತ್ರಿ ಪೂರ ನಿದ್ದೆಗೆಟ್ಟು ನಡಬಗ್ಗಿಸಿ ಸಸಿ ಕೀಳುತ್ತಿದ್ದವಳನ್ನ ಹಾಗೆ ಕುರಿಯನ್ನ ಎಳೆದುತರುವ ಹಾಗೆ ಗದ್ದೆಯಿಂದ ಹೊರತಂದು ಬಾರಿಸುತ್ತಿದ್ದ “ಒಂದು ಲೋಟ ಟೀ ಮಾಡಿಕೋಡಾಕೆ ಆಗಲ್ಲ ನಿಂಗೆ ನಿನ್ನ ಚರ್ಮ ಸುಲಿತೀನಿ ಹಾದರಗಿತ್ತೀ” ಅಂತ ಕೂಗಾಡುತ್ತಿದ್ದ…” ರೀ ಇನ್ನು ಸ್ವಲ್ಪ ಸಸಿ ಕಿತ್ತು ಬರ್ತೀನಿ ಮಕ್ಕಳ ಸ್ಕೂಲ್ ಪೀಜಿಗೆ ಆಕೈತಿ” ಹೋಗ್ರಿ ಮನಿಗೇ ಅಂತ ಕೇಳಿಕೊಂಡರೂ ಬಿಡುತ್ತಿರಲಿಲ್ಲ..ಗೌಡರ ಗದ್ದೆಯಿಂದ ಹೊಡೆಯುತ್ತ ಬರುತ್ತಿದ್ದವನು ಮನೆತನಕ ಬಂದರೂ ಬಿಡುತ್ತಿರಲಿಲ್ಲ.. ಊರಿನ ತನ್ನ ವಾರಿಗೆಯ ಹೆಂಗಸರ ಮುಂದೆ ತನಗಾಗುತ್ತಿದ್ದ ಅವಮಾನಕ್ಕೆ ಒಂದೊಂದು ಸಲ ಕುಸಿದು ಬೀಳುತ್ತಿದ್ದಳು…

ಒಂದೇ ಚಿಂತೆ ತನ್ನ ನೆರೆಹೊರೆಯವರೆಲ್ಲ ಗಂಡ ಹೆಂಡತಿ ಮಕ್ಕಳೊಡನೆ ಚೆನ್ನಾಗಿರಬೇಕಾದರೆ ನನಗ್ಯಾಕಪ್ಪ ಇಂತಾ ಹಿಂಸೆ ಅಂತ ದಿನಾ ಕೊರಗುತ್ತಾ ಇದ್ಲು. ತನ್ನೊಳಗೆ ಎಲ್ಲಾ ನೋವ ನುಂಗಿಕೊಂಡಿರುತ್ತಿದ್ದಳೇ ವಿನಹಾ ಅಪ್ಪಿ ತಪ್ಪಿ ಕೂಡ ನೆರೆಹೊರೆಯವರಲ್ಲಿ ತನ್ನ ಕಷ್ಟ ಹೇಳಿಕೊಳ್ಳುತ್ತಿರಲಿಲ್ಲ.ಕೂಲಿ ನಾಲಿ ಮಾಡಿ ಅಷ್ಟಿಷ್ಟು ಉಳಿದ ಹಣದಲ್ಲಿ ಮನೆಗೆ ಒಂದಿಷ್ಟು ಮಣ್ಣಿನ ಗಡಿಗೆಗಳನ್ನ ಶೇಕರಿಸಿಟ್ಟುಕೊಂಡರೇ ಕುಡಿದಾಗ ಅದರ ಮೇಲು ಅವನ ಕಣ್ಣು ಬೀಳುತ್ತಿದ್ದು..” ಮಗನೇ ಬಾರಲಾ ಇಲ್ಲಿ ಒಡೆದ್ ಹಾಕು ಆ ಗಡಿಗೇನ..ಯಾಕ್ ಬೇಕು ಈ ಚಿಕ್ ಮನೆಗೆ ಅಷ್ಟೋಂದು ಗಡಿಗೆಗಳು ಒಡೆದ್ ಹಾಕ್ಲ ” ಅಂತ ತನ್ನ ಮಗನಿಗೆ ಹೇಳಿದರೇ ಮಗ ಆದವನೂ ಹೇಗಾದರೂ ಒಡೆದಾನು? ” ಇಲ್ಲ ನಾನ್ ಒಡಿಯಾದಿಲ್ಲ ಅಂತ ಹೇಳಿದ ಕೂಡಲೇ ಅಲ್ಲಿದ್ದ ಮಣ್ಣಿನ ಗಡಿಗೆಯನ್ನ ಮಗನ ಮುಖಕ್ಕೆ ಬೀಸುತ್ತಿದ್ದ. ಹೀಗೆ ಮಾಡುತ್ತಿದ್ದುದ್ದರಿಂದಲೇ ಕೆಲವೊಂದು ಸಲ ಮಗ ಅಪ್ಪನ ಹೆದರಿಕೆಗೆ ಮಣಿದು ಅವ್ವಾ ಪ್ರೀತಿಯಿಂದ ಕೂಡಿಟ್ಟ ಮಣ್ಣಿನ ಗಡೀಗೆಗಳನ್ನ ನೋವಿನಿಂದ ಒಡೆದುಹಾಕುತ್ತಿದ್ದುದೂ ಇತ್ತು. ಒಂದೊಂದೆ ಮಣ್ಣಿನ ಗಡೀಗೆಗಳನ್ನ ಒಡೆದು ಹಾಕುತ್ತಿದ್ದರೆ ಅವ್ವ ಮಾತ್ರ ಮೂಲೆಯಲ್ಲಿ ಕುಳಿತು ಕಣ್ಣೀರಾಗುತ್ತಿದ್ದಳು. ಅಷ್ಟು ಮಣ್ಣಿನ ಗಡಿಗೆಗಳನ್ನ ಕೂಡಿ ಹಾಕಲಿಕ್ಕೆ ಅವಳು ಪಟ್ಟ ಕಷ್ಟವನ್ನ ನೆನೆಸಿಕೊಂಡರೆ ಎಂತವನಿಗಾದರೂ ಕರುಳು ನೋಯದೇ ಇರುವುದಿಲ್ಲ…

ಅದೆಷ್ಟು ಸಲ ಮನೆಯಿಂದ ನಡುರಾತ್ರಿ ಮಳೆಯಲ್ಲಿ ತೋಯುತ್ತ ನಿದ್ರೆ ಬಾರದ ರಾತ್ರಿಗಳನ್ನ ಕಳೆದಿದ್ದಾಳೋ ದೇವರಿಗೇ ಗೊತ್ತು… ಮನೆಯ ಗೋಡೆಗೆ ಹೊಂದಿಕೊಂಡಂತೆ ಇರುವ ಸದಾ ಕಾಲ ನೀರಿರುವ ಬಾವಿ. ಮನೆಯಿಂದ ಹೊರಗೆ ಹಾಕಿದ ಕೂಡಲೇ ಹೋಗಿ ಬಾವಿ ಕಟ್ಟೆಯ ಮೇಲೆ ಕೂರುತ್ತಿದ್ದಳು. ಮನಸ್ಸು ಮಾಡಿದ್ದರೇ ಯಾವತ್ತೋ ಒಂದು ದಿನ ಅದೇ ಬಾವಿಯಲ್ಲಿ ಹೆಣವಾಗಿ ತೇಲಬಹುದಿತ್ತು ಅವಳು. ಮಕ್ಕಳ ಮೇಲಿನ ಅತಿಯಾದ ಪ್ರೀತಿ ಅವಳನ್ನ ಅಂತ ಅನಾಹುತ ಮಾಡಿಕೊಳ್ಳದಂತೆ ತಡೆದಿತ್ತು.” ಅಣ್ಣಾ..ಅವ್ವ ಬಾವಿ ಕಟ್ಟೆ ಮ್ಯಾಲೆ ಕುಂತಾಳೇನೋ ನೋಡೋ ನಂಗೆ ಹೆದ್ರಿಕೆ ಆಗ್ತ ಐತಿ” ಅಂತ ತಂಗಿ ಹೇಳಿದರೇ ಅಪ್ಪನಿಗೆ ಗೊತ್ತಗದಂತೆ ಮುರುಕು ಬಾಗಿಲನ್ನ ತಳ್ಳಿಕೊಂಡು ಅಣ್ಣ ಹೊರಗೇ ನೋಡಿದರೇ ಅದೇ ಭಾವಿಕಟ್ಟೆಯ ಮೇಲೆ ಅದೇ ಚಳಿಯಲ್ಲಿ ಮುದುರಿ ಕುಳಿತುಕೊಂಡಿರುತ್ತಿದ್ದ ಗುಬಿ ಗಾತ್ರದ ಅವ್ವನ ಸ್ಥಿತಿ ನೋಡಿ ಕಣ್ಣೀರಾಗುತ್ತಿದ್ದ. ಅಳುತ್ತಿದ್ದ ಮಗನನ್ನ ಸಮಾಧಾನ ಪಡಿಸಿ “ನೀನ್ ಹೋಗಿ ಮಲಿಕ್ಯ ಮಗನೇ ಬಾಳ ಹೊತ್ತಾತು” ಅಂತ ತಾನು ಹಾಗೆ ಮುದುರಿ ಕುಳಿತುಕೊಳ್ಳುತ್ತಿದ್ದಳು.ಬೆಳಗ್ಗೆ ತನ್ನ ಕುಡುಕ ಗಂಡನ ನಿಶೆ ಇಳಿದಿದ್ದನ್ನ ನೋಡಿಕೊಂಡೆ ಮಕ್ಕಳಿಗೆ ಇದ್ದ ಅರೆಪಾವು ಅಕ್ಕಿಯಲ್ಲೆ ಗಂಜಿ ಮಾಡಿ ಹಾಕಿ ಶಾಲೆಗೆ ಕಳಿಸಿ ತಾನು ಮಾತ್ರ ಏನೂ ತಿನ್ನದೇ ಕೂಲಿ ಕೆಲಸಕ್ಕೆ ಹೊರಡುತ್ತಿದ್ದಳು. ಹಾಗೆ ಹಸಿದು ಹೋಗುತ್ತಿತ್ತ ಅವ್ವನನ್ನ ಮಕ್ಕಳೂ ಯಾಕಮ್ಮ ನೀನು ಹಂಗೆ ಹೋಕೀಯಾ ಅಂತ ಕೇಳಿದ್ರೆ..” ಅಯ್ಯೋ ಅಲ್ಲಿ ಮಧ್ಯಾಹ್ನ ಊಟ ಕೋಡುತ್ತಾರೆ ಕಣ್ರೋ ನೀವ್ ಹೋಗಿ ಅಂತ ಸಮಾಧಾನ ಮಾಡುತ್ತಾ ಕಳಿಸುತ್ತಿದ್ದಳು..

ಅವಳಿಗೆ ಯಾವತ್ತೂ ಒಡವೆ ಬಗ್ಗೆ ವ್ಯಾಮೋಹವಿರಲಿಲ್ಲ.ಇದ್ದ ತಾಳಿಗೆ ೧೦ ಬಂಗಾರದ ಗುಂಡು ಮಾಡಿಸಿ ಹಾಕಿಕೊಳ್ಳಬೆಕೆಂಬ ಆಸೆ ಮೊದಮೊದಲು ಇತ್ತಾದರೂ ಕೊನೆಕೊನೆಗೆ ತಾಳಿಯ ಮೇಲೆ ಕೂಡ ಅಂತ ನಂಬಿಕೆ ಮತ್ತೆ ವ್ಯಾಮೋಹವಿಲ್ಲದೇ ಹೋಯಿತು. ಕಾರಣ? ಕುಡಿದುಕೊಂಡು ಬಂದ ಗಂಡ ತಾಳಿಯನ್ನ ವಾರಕ್ಕೆರೆಡು ಬಾರಿ ಹರಿದು ಮನೆಯಿಂದ ಹೊರಗೆ ಕಳುಹಿಸುತ್ತಿದ್ದ.ಹರಿಯುವುದು ಮತ್ತೆ ಊರಿನ ಕೆಲವು ಹಿರಿಯರು???? ರಾಜಿ ಮಾಡಿಸಿ ಕಟ್ಟಿಸುವುದು ಮಾಮೂಲೆ ಆಗಿತ್ತು.ಒಂದೊಂದು ಸಲ ಸಿಟ್ಟಿಗೆದ್ದು ನನಗೆ ನನ್ ಮಕ್ಲು ಸಾಕು ಇಂತ ಗಂಡ ನಂಗೆ ಬೇಕಾಗಿಲ್ಲ. ಹಿಂಗೇ ಇದ್ರೆ ನನ್ ಮಕ್ಳನ್ನು ಸಾಯಿಸಿ ಬಿಡ್ತಾನೆ ಇವ್ನು.ನನ್ ಮಕ್ಳು ಕಟ್ಟಿಕೊಂಡು ನಾನ್ ಎಲ್ಲಾದ್ರು ಹೋಕೇನಿ ಅಂತ ಜೋರಾಗಿ ಅಳ್ತ ಇದ್ಲು. ಮತ್ತೆ ಎಲ್ಲವನ್ನು ಸರಿ ಮಾಡಿ?? ಊರ ಹಿರಿಯರೂ ಅವರವರ ಮನೆಗೆ ಹೊರಟರೇ,ಅಂತಾ ಅವ್ವನ ಎದೆಯಲ್ಲಿ ಕೂಡ ನಡುಕ..! ಇವತ್ತು ಮತ್ತೆ ಕುಡಿದು ಬಂದು ಮನೆ ಹೊರಗೆ ನಿಲ್ಲಿಸುತಾನೆಂದು. ತಾನಾದರೂ ಎಷ್ಟು ದಿನ ಹೀಗೆ ನಿದ್ದೆಗೆಟ್ಟು ಇಂತ ನರಕಯಾತನೆಯನ್ನು ಸಹಿಸಿಕೊಂಡಾಳು?..

“ಅಕ್ಕಾ ಅಕ್ಕಾ ನಿನ್ ಗಂಡ ಕುಡಿದು ಊರು ಹೊರಗಿನ ತೋಟದಲ್ಲ್ ಬಿದ್ದಾನೆ ಮೈಮೇಲೆ ಜ್ನಾನ ಇಲ್ಲ ಮಳೆ ಬ್ಯಾರೆ ರವಷ್ಟ್ ಜಾಸ್ತೀನೆ ಬರ್ತ ಐತೆ” ಅಂತ ಊರ ದನಗಳನ್ನ ಕಾಯುವ ಹುಡುಗಾ ಹೇಳಿದ್ದೆ ತಡ.” ಈ ಮನೆಹಾಳ್ರು ನನ್ ಮನೆ ನೆ ತೆಗುದ್ರಪ್ಪಾ ಇವರ್ ಮನೆ ಹಾಳಾಗ ಈ ಸಾರಾಯಿ ಕುಡ್ಸೋರ ಮನೆ ಕಾಯ್ವಾಗ” ಅಂತ ಅಷ್ಟು ಮಳೆನಲ್ಲಿ ಕಂಬಳಿ ಹಾಕೋಂಡು, ಅಂತ ಮಳೆನಲ್ಲಿ ಓಡಿಹೋಗಿದ್ದಳು ತಾಯಿ. ಅಲ್ಲಿ ಕುಡಿದು ಬಿದ್ದಿದ್ದ ತನ್ನ ಗಂಡಾನನ್ನ ನಿಧಾನವಾಗಿ ಎಬ್ಬಿಸಿ ತಂದು ಮನೆನಲ್ಲಿ ಮಲಗಿಸಿ ಮತ್ತೆ ಬಯ್ಯೋಕೆ ಶುರು ಮಾಡ್ತ ಇದ್ಲು. ಅಷ್ಟರಲ್ಲಿ ನಮ್ಮೂರಿನ ಸಾರಾಯಿ ಮಾರೋ ಮನೆಯ ಯಜಮಾನ?? … “ಅಯ್ ಅದ್ಯಾಕಂಗೆ ಬೈಯ್ತಿಯಾ ನಿನ್ ಗಂಡನ್ ಮನೆನಲ್ಲಿ ಕಟ್ಟಾಕೋ ಕುಡಿಯಾಕೆ ಕಳ್ಸ್ ಬ್ಯಾಡ”ಅಂತ ಹೇಳಿದ ಕೂಡಲೇ ” ಹೂನೋ ಬೇವರ್ಸಿ ನನ್ ಗಂಡನ್ ಕಟ್ಟಾಕೊತೀನಿ ಮನೆಹಾಳ ಮೊದಲು ನಿನ್ನ ಹೆಂಡ್ರು ಮದ್ಯ ರಾತ್ರಿ ನಮ್ ಮನೆ ಪಕ್ಕದ್ ಮನೆ ಹನುಮಂತನ ಮನಿ ಒಳಕ್ಕೆ ಪುಸುಕ್ಕ್ ಅಂತ ಯಾಕ್ ಹೊಕ್ಕೊತ್ತಳೆ ಅಲ್ಲವ ಅವಳನ್ನ ಮೊದಲು ಕಟ್ಟಾಕೊಳೋ ರಂಡೆಗಂಡ ಮನೆಹಾಳ ನನಗೆ ಹೆಳಾಕ ಬರ್ತಿಯ ,ನಮ್ಮೂರಿನ ಹೆಂಡ್ರು ಮಕ್ಕಳ ಶಾಪ ತಟ್ಟದೇ ಬಿಡಾದಿಲ್ಲ ನೋಡು ” ಅಂತ ಅವನ ಮೇಲೆ ಜಗಳಕ್ಕೆ ಹೊರಟಿದ್ದಳು ಒಂದು ಸಲ..

ಮನೆಯಲ್ಲಿ ಗಂಡ ಎಷ್ಟೇ ಹೊಡೆದರೂ ಪಕ್ಕದ ಮನೆಯವರಿಗೆ ಗೊತ್ತಾಗದೇ ಇರುತ್ತಿದ್ದಳು..ಯಾಕೆ ಕೈಮೇಲೆಲ್ಲ ಸುಟ್ಟ ಗಾಯ ಅಂತ ಕೆಲಸಕ್ಕೆ ಹೋದಾಗ ಕೆಲ್ಸದ ಹೆಂಗಸರೂ ಕೇಳಿದರೇ” ಅಯ್ಯೋ ಅದಾ ಬೆಳಗ್ಗೆ ನಲ್ಡಿ ಮನೆ[ಸ್ನಾನದ ಮನೆ] ಗೆ ಬೆಂಕಿ ಹಾಕೋವಾಗ ಹೀಗ್ ಆಯ್ತಪ್ಪ ಅಂತ ದು:ಖ ಮುಚ್ಚಿಡುತ್ತಿದ್ದಳು.ಅದೆಷ್ಟು ದಿನ ಉಪವಾಸ ಮಾಡಿದ್ದಳೋ ದೇವರಿಗೇ ಗೊತ್ತು. ಮನೆಯಲ್ಲಿದ್ದ ಅಕ್ಕಿಯೆಲ್ಲ ಕಾಲಿಯಾಗಿ ತಿನ್ನೋಕೆ ಏನು ಇಲ್ಲವಾದಗ ಅಲ್ಲಿ ಇಲ್ಲಿ ಶೇಕರಿಸಿಟ್ಟ ನುಚ್ಚನ್ನ ಗಂಜಿ ಮಾಡಿ ಮಕ್ಕಳಿಗೆ ತಿನ್ನಿಸಿ ತಾನು ಮಾತ್ರ “ಹೊಟ್ಟೇ ಯಾಕೊ ನೋವು ಕಣ್ರೋ ನನಗೆ,ಮದ್ಯಾನ ಜಾಸ್ತಿ ಊಟ ಮಾಡಿದೆ ಅಂತ ಕಾಣುತ್ತೆ ಗೌಡರ ತೋಟದ ಕೆಲ್ಸಕ್ಕೆ ಹೋದಾಗ” ಅಂತ ಹೇಳಿ ತಾನು ಮಾತ್ರ ಹಾಗೆಯೇ ಮಲಗುತ್ತಿದ್ದಳು.ಇಂತ “ಮಹಾನ್ ಸುಳ್ಳುಗಳನ್ನೇನು ” ಕಮ್ಮಿ ಹೇಳುತ್ತಿರಲಿಲ್ಲ.

ಇದ್ದ ಹರಕಲು ಮುರುಕಲು ಮನೆಯ ೪ ಗೋಡೆಗಳಲ್ಲಿ ಆ ಹೊತ್ತಿಗಾಗಲೇ ೨ ಗೋಡೆ ಅರ್ದ ಕುಸಿದು ಕುಳಿತಿದ್ದವು. ಕಂಡ ಕಂಡವರನ್ನೆಲ್ಲ ಕಾಡಿ ಬೇಡಿ ಗ್ರಾಮಪಂಚಾಯತಿ ಕಛೇರಿಗೆ ಅಲೆದು ಅಲೆದೂ ಒಂದು ಆಶ್ರಯಾ ಮನೆಯನ್ನ ಮಂಜೂರು ಮಾಡಿಸಿಕೊಂಡೇ ಬಿಟ್ಟಳು. ಹೇಗಿದ್ರು ಸರ್ಕಾರಿ ಮನೆ ಅಲ್ಲವ ಅರ್ದಂಬರ್ದ ಆಗಿದ್ದ ಮನೆಗೆ ತನ್ನ ಗಂಡನನ್ನ ಕಾಡೀಬೇಡಿ ಅದಕ್ಕೆ ಚಂದನೆಯ ಗೋಡೆ ಕಟ್ಟಿಕೊಂಡು, ನೋಡನೋಡುತ್ತಿದ್ದಂತೆಯೆ ಒಂದು ಚಂದನೆಯ ಮನೆ ಊರ ಹೊರಗೆ ನಿಂತಿತ್ತು. ಒಂದೆ ಸಮಾಧಾನ ಅವಳಿಗೆ ಇನ್ನು ಮುಂದೆ ನನ್ನ ಮಕ್ಕಳು ಮಳೆಯಲ್ಲಿ ತೋಯುವ ಹಾಗಿಲ್ಲ.ರಾತ್ರಿಪೂರ ನಿದ್ದೆಗೆಟ್ಟು ಮಳೆಬಂದಾಗ ಒಳನುಗ್ಗುತ್ತಿದ್ದ ನೀರನ್ನ ಆಚಗೆ ಹಾಕೊ ಕರ್ಮವಿಲ್ಲ. ಹೀಗೆ ಬದುದು ಸಾಗುತ್ತಿರುವಾಗಲೇ ಒಂದು ದಿನ ಕುಡಿದು ಬಂದ ಗಂಡ ಊಟ ಬೇಕೆಂದಾಗ ” ಸ್ವಲ್ಪ ಅಕ್ಕಿ ಇತ್ತು ಮಕ್ಕಳಿಗೆ ಗಂಜಿ ಮಾಡಿ ಹಾಕಿ ಮಲಗಿಸಿಬಿಟ್ಟೆ ರೀ ನಾ ಕೂಡ ಏನು ತಿಂದಿಲ್ಲ” ಅಂದಿದ್ದು ಒಂದೆ ಮಾತು ಅದ್ಯಾವ ಮಹತಾಯಿ ಹೆತ್ತಿದ್ದಳೋ ಅವನನ್ನ ೩ ಮಕ್ಕಳಲ್ಲಿ ಅವನಿಷ್ಟ ಪಡುತ್ತಿದ್ದ ಒಂದು ಹೆಣ್ಣು ಮಗಳನ್ನ ಹೊರಗೆ ಕರೆದು ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿ ಮನೆಗೆ ಬೆಂಕಿ ಕೊಟ್ಟೆ ಬಿಟ್ಟ..!!!! ಬೇಸಿಗೆ ಕಾಲ ಹುಲ್ಲಿನ ಮನೆಯದ್ದರಿಂದ ಬಹುಬೇಗ ಇಡೀ ಮನೆ ಬೆಂಕಿಯುಂಡೆಯಂತಾದರೇ ಮನೆಯಿಂದ ಯಾರು ಹೊರಗೆ ಬರಬಾರದೆಂದು ಮನೆ ಮುಂದೆ ಅರ್ದ ಕಟ್ಟಿದ್ದ ಗೋಡೆಯ ಹತ್ತಿರ ಕೊಡಲಿಯನ್ನು ಹಿಡಿದುಕೊಂಡು ನಿಂತಿದ್ದ ಮಹಾನುಭಾವ.ಮನೆ ಹಿಂದೆ ಕಟ್ಟಿದ ಅರ್ದ ಗೋಡೆಯನ್ನ ಹಾರಿ ತಪ್ಪಿಸಿಕೊಳ್ಳಲಡ್ಡಿಯೇನು ಇರಲಿಲ್ಲ. ಆದರೆ ತಾಯಿ ಮಕ್ಕಳ ಪುಸ್ತಕಗಳನ್ನ ಬಟ್ಟೆಬರೆಗಳನ್ನ ತೆಗಿಯೋಕೆ ಹೋಗಿ ಕೈಸುಟ್ಟುಕೊಂಡಿದ್ದಳು. ಮಗನೂ ಚಿಕ್ಕವನೇನು ಆಗಿರಲಿಲ್ಲ ಅಮ್ಮ ಮತ್ತು ತಂಗಿಯನ್ನ ಬಲವಂತವಾಗಿ ಮನೆ ಹಿಂದಿನ ಗೋಡೆಯಿಂದ ಆಚೆಗೆ ಕಳಿಸಿ ತಾನು ಗೋಡೆ ಹಾರಿ ಪ್ರಾಣ ಉಳಿಸಿಕೊಂಡಿದ್ದ. ಬೆಂಕಿ ಬಿದ್ದ ಮನೆಯಲ್ಲಿದ್ದ ಅಷ್ಟೂ ಬಟ್ಟೆಬರೆಗಳು ದಿನನಿತ್ಯ ಉಪಯೋಗಿಸುವ ಸಾಮನುಗಳು ನೋಡನೋಡುತ್ತಿದ್ದಂತೆಯ ಬೆಂಕಿಯಲ್ಲಿ ಸುಟ್ಟು ಕರುಕಲು. ತಾಯಿ ಎದೆಬಡಿದುಕೊಂಡು ಅಳುತಿದ್ದರೆ ಬೆಂಕಿ ಹಾಕಿದ ಮಹಾನುಭಾವ ಮಾತ್ರ ತನಗೇನು ಆಗೇ ಇಲ್ಲವೆಂದು ಊರ ಜನರ ಬೈಗುಳಗಳಿಗೆ ತಲೆತಗ್ಗಿಸಿ ನಿಂತಿದ್ದ. ತನ್ನದೆಲ್ಲವನ್ನು ಕಳೆದುಕೊಂಡು ತಾಯಿ ರೋಧಿಸುತ್ತಿದ್ದುದ್ದನ್ನ ಕಂಡ ಮಗ ಸಿಟ್ಟಿನಿಂದ ಅಲ್ಲೆ ಇದೆ ಮರದ ತುಂಡನ್ನ ತೆಗೆದುಕೊಂಡು ಅಟ್ಟಾಡಿಸಿಕೊಂಡು ಬಡಿಯುತ್ತಿದ್ದರೆ ಯಾರೆಂದರೇ ಯಾರು ಬಿಡಿಸಲು ಬಂದಿರಲಿಲ್ಲ. ಹಾಗೆ ಸಿಟ್ಟಿನಿಂದ ಕಾಲಿನಲ್ಲಿ ತುಳಿಯುತ್ತಿದ್ದ ಮಗನನ್ನ ದೂರತಳ್ಳಿದವಳೇ ” ಅಪ್ಪನಿಗೇ ಹೊಡೆಯುವಷ್ಟು ದೈರ್ಯ ಬಂತೇನೋ ನಿನಗೆ” ಅಂದು ಗಂಡನನ್ನ ಬಿಡಿಸಿಕೊಂಡಿದ್ದಳು.

ಅವತ್ತು ಅವನಿಗಾದ ಅವಮಾನದಿಂದ ಕುದ್ದು ಹೋಗಿದ್ದ.೩ ದಿನಕ್ಕೆ ತನ್ನ ಕುಡುಕ ಗೆಳೆಯರ ಸಹಕಾರದಿಂದ ಒಂದು ಚಿಕ್ಕ ಮನೆಯನ್ನ ಮಾಡಿಯೇ ಬಿಟ್ಟ. ಊರ ಮುಂದೇಯೇ ತನಗೆ ಮೈ ಕೈಯಲ್ಲಿ ರಕ್ತ ಬರುವಂತೆ ಹೊಡೆದ ಮಗನ ಮೇಲೆ ಅದ್ಯಾವ ಸಿಟ್ಟಿತ್ತೆಂದರೇ… ಸಿಕ್ಕರೆ ಅವನ ತಲೆ ಕಡಿಯುತ್ತೇನೆಂದು ಅಬ್ಬರದಿಂದ ಅಬ್ಬರಿಸುತ್ತಿದ್ದ.ದುಷ್ಟ ಅಪ್ಪನ ಹೆದರಿಕೆಯಿಂದ ಕಂಗಾಲಾದ ಮಗ ಮನೆ ಬಿಟ್ಟು ಊರಿಂದ ಹೊರ ಬಂದು ಬಿಟ್ಟ. ಮತ್ತೆ ಊರಿಗೆ ಹೋಗಿದ್ದು ೨ ವರ್ಷಗಳ ನಂತರ ಅವನ ತಂಗಿ ಪೋನ್ ಮಾಡಿ ” ಅಣ್ಣಯ್ಯಾ ಅಪ್ಪನಿಗೆ ಲಕ್ವಾ ಆಗೈತಿ ಕಣೋ” ಅಂತ ಕಣ್ಣೀರಿಟ್ಟಾಗಲೆ.

೩ ವರ್ಷಗಳ ನಂತರ ಊರಿಗೆ ಹೋದವನಿಗೆ ಅಲ್ಲಿದ್ದದ್ದನ್ನ ಕಂಡು ಮಾತೆ ಹೊರಡುತಿರಲಿಲ್ಲ. ಅಪ್ಪ ಅಸಹಾಯಕತೆಯಿಂದ ಕುಳಿತಿದ್ದ ಕೈ ಕಾಲುಗಳೆಲ್ಲ ನಡುಗುತ್ತಿದ್ದವು. ಒಂದೆ ಸಮನೇ ಕಣ್ಣೀರು ಹಾಕುತ್ತಿದ್ದ .ಗೊತ್ತಾಗಿರಬೇಕು ಅವನಿಗೆ ಯಾರು ಮತ್ತೆ ಯಾವುದು ಶಾಶ್ವತವಲ್ಲವೆಂದು. ಅವತ್ತು ಒಂದೆ ಒಂದು ಮಾತು ಆಡಲಿಲ್ಲ ಸುಮ್ಮನೆ ಕಣ್ಣೀರು ಹಾಕುತ್ತಿದ್ದ. ತಾಯಿ ಒಂದು ಮೂಲೆಯಲ್ಲಿ ಅಳುತ್ತ ಕೂತಿದ್ದಳು. ಅವತ್ತಿಂದ ಸ್ವಲ್ಪ ಬದಲಾದನಾದರೂ ಪೂರ್ತಿ ಬದಲಾಗಲಿಲ್ಲ ಅದು ಅವನ ಜಾಯಮಾನ. ಕುಡಿದು ಕುಡಿದು ಅರೋಗ್ಯ ಪೂರ್ತಿ ಹಾಳು ಮಾಡಿಕೊಂಡ. ಊರಲ್ಲಿ ಸ್ವಲ್ಪ ದಿನ ಇದ್ದು ಹಿಂದಿರುಗಿದ ಮಗನಿಗೆ ಮತ್ತೆ ಸುದ್ದಿ ಬಂತು. ಅಪ್ಪನಿಗೆ ಮಾತು ಹೊರಟು ಹೋಗಿದೆ ಸರಿಯಾಗಿ ನಡೆಯಲಿಕ್ಕು ಬರುತ್ತಿಲ್ಲ. ಮತ್ತೆ ಊರಿಗೆ ಹೋದಾಗ ನೋಡಿದರೇ ಅಪ್ಪನ ಸ್ಥಿತಿ ಕಂಡು ಕಣ್ಣೀರಾಗಿದ್ದ. ಅವತ್ತಿಂದ ಇವತ್ತಿನವರೆಗೂ ತಾಯಿ ಅವನ ಸೇವೆ ಮಾಡುತ್ತಲೇ ಇದ್ದಾಳೆ ಕೈ ಹಿಡಿದು ಕೂರಿಸುವುದರಿಂದ ಹಿಡಿದು ಅವನ ಎಲ್ಲ ಕೆಲಸಗಳನ್ನು ತಾಯಿ ತನ್ನ ಕೆಲಸಗಳೆಂದೇ ಮಾಡುತ್ತಿದ್ದಾಳೆ.ಸ್ವಲ್ಪವೂ ಅಸಹ್ಯ ಪಡದೇ ಸ್ವಲ್ಪವೂ ಬೇಸರವಿಲ್ಲದೇ. ಸರಿಯಾಗಿ ನಡೆಯಲು ಬಾರದ ಗಂಡ ಕೈ ಸನ್ನೆ ಮಾಡಿ ನನಗೆ ಸರಾಯಿ ಬೇಕೆಂದು ಕೇಳಿದಾಗ ಪಕ್ಕದೂರಿನಿಂದ ಯಾರದೋ ಕೈನಲ್ಲಿ ೫ ರೂಪಾಯಿ ಕೊಟ್ಟು ಸಾರಾಯಿ ತರಿಸಿ ತಾನೆ ಕುಡಿಸಿ ಇವತ್ತಿಗೂ ಗಂಡನ ಸೇವಯೆನ್ನ ಪ್ರೀತಿಯಿಂದ ಮಾಡುತ್ತಿದ್ದಾಳೆ. ಅವಳಿಗೆ ತನ್ನ ಗಂಡ ಕರುಣಿಸಿದ ಹಿಂಸೆ ಕಣ್ಣೀರು ಅವಮಾನ ಇದ್ಯಾವುದರ ಚಿಂತೆ ಇಲ್ಲ. ಈಗ ತನ್ನ ಗಂಡನಿಗೆ ಹೆಂಡತಿ ಮತ್ತೆ ತಾಯಿ ಎರೆಡು ಅವಳೆ…..

ಇದಕ್ಕೆ ಯಾವ ತರಹದ ಪ್ರೀತಿ ಅಂತೀರಿ? ಯಾವ ತರಹದ ಸಹನೆ ಅಂತೀರಿ? ಭೂಮಿ ತೂಕದವಳೂ ಭೂಮಿ ತೂಕದವರೂ ಅಂದರೆ ಇಂತ ತಾಯಂದಿರೇ ಅಲ್ಲವೇ?……………….

by
www.navilagari.wordpress.com
navila_gari@yahoo.com